ಉಡುಪಿ: ಈಶ್ವನಗರದ ಬಳಿ ಇರುವ ಡೌನ್ ಟೌನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಮುಂಭಾಗದಲ್ಲಿ ನ.8ರಂದು ರಾತ್ರಿ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಯುವಕರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಮರ್ ಶೆಟ್ಟಿ, ಚಂದನ್ ಸಿ ಸಾಲ್ಯಾನ್, ಧನುಷ್ ಮತ್ತು ಅಜಯ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಾರ್ ನಲ್ಲಿ ಅಮರ್ ಶೆಟ್ಟಿ, ಧನುಷ್, ನಿತೇಶ್, ಸುಜನ್, ನಿನಾದ್ ಅಜಯ್ ಊಟ ಮಾಡುತ್ತಿರುವಾಗ ಚಂದನ್ ಎಂಬಾತನ ಕೈ ಅಮರ್ ಶೆಟ್ಟಿಯ ಮೈಗೆ ತಾಗಿದೆ. ಈ ಕ್ಷುಲ್ಲಕ ವಿಚಾರದಲ್ಲಿ ರಸ್ತೆಯಲ್ಲೇ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿಕೊಂಡು ಹೊಡೆದಾಡಿಕೊಂಡು ಬೈದಾಡಿಕೊಂಡಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆಯ ಬಗ್ಗೆ ರಾತ್ರಿ ಗಸ್ತಿನಲ್ಲಿದ್ದ ಎ.ಎಸ್.ಐ ಮೋಹನ್ ದಾಸ್ ನೀಡಿದ ದೂರಿನಂತೆ ಆರೋಪಿಗಳ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
